ಬುಧವಾರ, ಅಕ್ಟೋಬರ್ 26, 2022

ಮಿಂಬಲೆಯಲ್ಲಿ ಕೆಲವು ಕನ್ನಡ ಪದನೆರಕೆಗಳು

ಈಗಾಗಲೇ ಮಿಂಬಲೆ ನಮ್ಮ ಬದುಕಿನಲ್ಲಿ ಒಂದು ದೊಡ್ಡ ಪಾಂಗಾಗಿ ಬೆಳೆದಿದೆ. ಮಿಂಬಲೆಯಲ್ಲಿ ತುಂಬಾ ತಿಳಿವು ಸಿಗುವುದು ಸರಿ, ಈಗ ಹಲವು ಕನ್ನಡ ಪದನೆರಕೆಗಳು ಕೂಡ ಇಲ್ಲಿವೆ, ಈ ಬರಹದಲ್ಲಿ ಕೆಲವು ತಿಳಿಸಲಾಗಿದೆ. 

೧. ತಿಳಿಪದ (ಅರಿಮೆ ಮತ್ತು ಚಳಕದರಿಮೆ ಪದನೆರಕೆ) :- https://tilipada.org

೨. ಮರಿಯಪ್ಪ ಬಟ್ ಅವರ "ಕಿಟ್ಟೆಲರ ಕನ್ನಡ ಇಂಗ್ಲಿಷ್ ನಿಘಂಟು (೪ ಸಂಪುಟಗಳು)" :-  https://dsal.uchicago.edu/dictionaries/kittel/

೩. ಮಯ್ಸೂರು ಕಲಿಕೆವೀಡಿನ "ಇಂಗ್ಲಿಷ್-ಕನ್ನಡ ನಿಘಂಟು" :- https://uni-mysore.ac.in/mlrccdictionary/listing/alphabet/

೪. ವಿ.ಕ್ರುಶ್ಣ ಅವರ ಅಲರ್ "Kannada → English dictionary" :- https://alar.ink

೫. ಬರಹ ನಿಗಂಟು :-  https://baraha.com/kannada/browse.php (ಕೊಂಡಿಯಲ್ಲಿ ಹಲವು ಪದನೆರಕೆ/ಗುಂಪಿನ ಕೆಲಸಗಳಿವೆ, ಎತ್ತುಗೆ "ಪದ ಪದ ಕನ್ನಡ ಪದಾನೇ" ಗುಂಪು)

೬. ವಿಕ್ಶನರಿ :-  https://kn.wiktionary.org 

೭. ಪದಕಣಜ (ಕರ್ನಾಟಕ ಆಳ್ವಿಕೆ ತಾಣ) :- https://padakanaja.karnataka.gov.in/ 

ಶನಿವಾರ, ಜೂನ್ 18, 2022

ಪದವಿನ್ಯಾಸ - ಕನ್ನಡ ಹಲತನ ಸಾರುವ ಹೊತ್ತಗೆ

ಕರ್ನಾಟಕದ ನುಡಿ ಕನ್ನಡವನ್ನೇ ತೆಗೆದುಕೊಂಡರೆ ಅದರೊಳಗೆ ಹಲವು ಕನ್ನಡಗಳಿವೆ. ಒಂದು ಊರಿನಿಂದ ಇನ್ನೊಂದು ಊರಿನ ಕನ್ನಡದಲ್ಲಿ ಹಲವು ಬೇರ‍್ಮೆಗಳನ್ನು ನಾವು ಕಾಣಬಹುದು. ಕನ್ನಡದಲ್ಲಿ ಹಲವು ಊರುಗಳಲ್ಲಿ ಹಲವು ಬಗೆಗಳಲ್ಲಿ ಕನ್ನಡವು ಬಳಕೆಯಾಗುತ್ತಿದೆ. ಕನ್ನಡದಲ್ಲಿ ಹಲವು ಒಳನುಡಿಗಳಿವೆ ಎಂದು ಹೇಳಬಹುದು. 

ಈ ಹಲವು ಒಳನುಡಿಗಳನ್ನು ಗಮನದಲ್ಲಿಟ್ಟಿಕೊಂಡು ಒಂದೇ ಪದದ ಹಲವು ಬಗೆಗಳ ಜೊತೆ ಅದೇ ಪದಕ್ಕೆ ಬೇರೆ ಊರುಗಳಲ್ಲಿ ಸಾಟಿಯಾದ ಪದಬಳಕೆ ಕುರಿತು ಬರೆದಿರುವ ಹೊತ್ತಗೆ "ಪದವಿನ್ಯಾಸ". ಇದನ್ನು ಬರೆದವರು ಡಾ || ಅಶೋಕಕುಮಾರ ರಂಜೇರೆ. ಒಕ್ಕಲುತನವನ್ನು ಗಮನದಲ್ಲಿಟ್ಟಿಕೊಂಡು ಹದಿನಯ್ದು ಪದಗಳು, ಅವುಗಳ ಹಲವು ಬಗೆಗಳು ಮತ್ತು ಸಾಟಿ ಪದಗಳ ಪಟ್ಟಿ ಇದೇ ಹೊತ್ತಗೆಯಲ್ಲಿ ನೀಡಲಾಗಿದೆ.  ಹೊತ್ತಗೆ ಹೊದಿಕೆಪುಟ ಇಲ್ಲಿದೆ :- 


ಈ ಹೊತ್ತಗೆಯಲ್ಲಿ ಒಂದೇ ಪದ ಬೇರೆ ಊರುಗಳಲ್ಲಿ ಹೇಗೆ ಬಳಕೆಯಾಗಿದೆ ಎಂದು ತಿಳಿಸುವ ಜೊತೆ ಬೇರೆ ಊರುಗಳಲ್ಲಿ ಇದೇ ಪದಕ್ಕೆ ಸಾಟಿಯಾಗಿ ಬಳಕೆಯಾಗುತ್ತಿರುವ ಪದಗಳನ್ನು ಕೂಡ ತಿಳಿಸಲಾಗಿದೆ. ಒಂದೇ ಪದ ಕರ್ನಾಟಕದ ಬೇರೆ ಬೇರೆ ಕಂಪಣಗಳಲ್ಲಿ ಹೇಗೆ ಬಳಕೆಯಲ್ಲಿದೆ ಎಂದು ನಾಡತಿಟ್ಟದ(ಮ್ಯಾಪ್) ನೆರವಿನಿಂದ ತಿಳಿಸಲಾಗಿದೆ. ಒಟ್ಟಿನಲ್ಲಿ ಕನ್ನಡದೊಳಗೆ ಹಲವು ಕನ್ನಡಗಳಿವೆ. 


ಬುಧವಾರ, ಏಪ್ರಿಲ್ 13, 2022

ಕನ್ನಡ ಜಾನಪದ ನಿಘಂಟು

ಕನ್ನಡ ನುಡಿಯಲ್ಲಿ ಹಲವು ಪದನೆರಕೆಗಳು ಹೊರಬಂದಿವೆ ಮತ್ತು ಹಲವು ಬಗೆ ಪದನೆರಕೆಗಳು ಹೊರಬಂದಿವೆ. ಕನ್ನಡ ನುಡಿಯಲ್ಲಿ ಹಿಂದಿನಿಂದಲು ಈ ಕೆಲಸ ನಡೆದುಕೊಂಡು ಬಂದಿದೆ. ಇತ್ತೀಚಗೆ ಇದೇ ಪಟ್ಟಿಗೆ ಹೊಸ ಸೇರ‍್ಪಡೆಯೆಂದರೆ ಅದು "ಕನ್ನಡ ಜಾನಪದ ನಿಘಂಟು". ಈ ಕೆಲಸವನ್ನು ಕರ್ನಾಟಕ ಜಾನಪದ ವಿಶ್ವವಿದ್ಯಾಲಯ ಕೈಗೆ ಎತ್ತಿಕೊಂಡಿದೆ. ಈ ಪದನೆರಕೆ ಹಲವು ಕಂತುಗಳ ಪದನೆರಕೆಯಾಗಿದೆ ಎಂದು ನಾವು ಗಮನಿಸಬೇಕು. ಇಲ್ಲಿಯ ತನಕ ನಾಲ್ಕು ಕಂತುಗಳು ಬಿಡುಗಡೆಯಾಗಿದೆ. ಈ ಪದನೆರಕೆಯ ಕೆಲವು ಹೊದಿಕೆಪುಟದ ತಿಟ್ಟಗಳು ಇಲ್ಲಿದೆ :-  



ಇದೊಂದು ದೊಡ್ಡ ಕೆಲಸವೇ ಸರಿ, ಜಾನಪದದಲ್ಲಿ ಬಳಕೆಯಾಗುವ ಹಲವು ಪದಗಳ ಜೊತೆ ಕರ್ನಾಟಕದ ಹಲವು ಊರುಗಳ ಕುರಿತು ತಿಳಿವು ಈ ಪದನೆರಕೆಯಲ್ಲಿ ಸಿಗುತ್ತದೆ. ಕನ್ನಡ ನುಡಿಗೆ ಒಂದು ದೊಡ್ಡ ಕೊಡುಗೆಯೆಂದು ಹೇಳಲೇ ಬೇಕು. ಪದಗಳ ಜೊತೆ ಅವುಗಳ ಬಳಕೆ ಕೂಡ ಇದೆ. ಇದರ ಜೊತೆ ಇಂಗ್ಲಿಶ್ ನುಡಿಯಲ್ಲು ಕೂಡ ತಿಳಿವು ನೀಡಲಾಗಿದೆ. ಇಲ್ಲಿಯ ತನಕ ನಾಲ್ಕು ಕಂತುಗಳು ದೊರಕಿದೆ ಮತ್ತು ಹಲವು ಕಡೆ ಬೆರಗು ಮೂಡಿಸುವ ಒರೆಗಳು ದೊರೆಯುತ್ತವೆ. ಈ ಪದನೆರಕೆಯ ಕೆಲವು ಒರೆಗಳ ತಿಟ್ಟ ಇಲ್ಲಿದೆ :- 





ಬುಧವಾರ, ಮಾರ್ಚ್ 16, 2022

ಚಂಪೂ ನುಡಿಗನ್ನಡಿ (ಹಳಗನ್ನಡ ಶಬ್ದಾರ್ಥಸಂಕಲನ - ಪ್ರಯೋಗಗಳೊಂದಿಗೆ)

ಕನ್ನಡ ನುಡಿಗೆ ನಿಡಿದಾದ ಹಿನ್ನಡವಳಿಯಿದೆ, ಇದರಲ್ಲಿ ನಾವು ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಕುರಿತು ಕೇಳಿರುತ್ತೇವೆ. ಆದರೆ ಕನ್ನಡದಲ್ಲಿ ಹಿಂದೆ ಬಳಕೆಯಾದ ಒರೆಗಳ ಕುರಿತು ತಿಳಿದುಕೊಳ್ಳಲು ನೆರವಾಗುವ ಒಂದು ಹೊತ್ತಗೆ "ಚಂಪೂ ನುಡಿಗನ್ನಡಿ". ಇದನ್ನು ಬರೆದವರು ಡಾ || ಪಿ.ವಿ.ನಾರಾಯಣ. ಈ ಹೊತ್ತಗೆಯಲ್ಲಿ ಒರೆಗಳ ಹುರುಳು ಜೊತೆ ಅವುಗಳ ಬಳಕೆ ಕೂಡ ದೊರೆಯುತ್ತದೆ. ಹೊತ್ತಗೆ ಹೊದಿಕೆಪುಟದ ತಿಟ್ಟ ಇಲ್ಲಿದೆ :- 


ಕನ್ನಡದಲ್ಲಿ ಹಿಂದಿನಿಂದಲು ಹಲವು ಬರಹಗಾರರ ಹಲವು ಬರಹಗಳ ಕೊಡುಗೆಯಿದೆ. ಚಂಪೂ ನುಡಿಗನ್ನಡಿ ಹೊತ್ತಗೆಯಲ್ಲಿ ತಿಳಿಸಿರುವ ಒರೆಬಳಕೆ ಯಾವ ಬರಹಗಳಿಂದ ಆಯ್ಕೆ ಮಾಡಲಾಗಿದೆ ಎಂದು ತಿಳಿಯಲು ಆ ಬರಹಗಳ ಪಟ್ಟಿಯ ತಿಟ್ಟ ಇಲ್ಲಿದೆ :- 



ಈ ಹೊತ್ತಗೆಯಲ್ಲಿ ಹಲವು ಹಲವು ಕನ್ನಡ ಒರೆಗಳು ದೊರೆಯುವ ಜೊತೆಗೆ ಕೆಲವು ಒರೆಗಳನ್ನು ನೋಡಿದರೆ ಬೆರಗು ಮೂಡುತ್ತದೆ. ಎಲ್ಲ ಒರೆಗಳಿಗೆ ಹುರುಳು ಜೊತೆ ಹಿಂದೆ ಯಾವ ಬರಹದಲ್ಲಿ ಬಳಕೆಯಾಗಿತ್ತೆಂದು ತಿಳಿಸಲಾಗಿದೆ. ಬೆರಗು ಮೂಡಿಸುವ ಒಂದು ಎತ್ತುಗೆ ಎಂದರೆ ಅದು "ಕಾದಲ್" ಬೇರು ಒರೆಯಿಂದ ದೊರೆತಿರುವ "ಕಾದಲ, ಕಾದಲಳ್, ಕಾದಲಿಸು, ಕಾದಲೆ ಮತ್ತು ಕಾದಲ್ಮೆ" ಒರೆಗಳು. ಈ ಎಲ್ಲ ಒರೆಗಳ ಹುರುಳು, ಬಳಕೆ ಹೊತ್ತಗೆಯಲ್ಲಿದೆ, ಈ ಎಲ್ಲ ಒರೆಗಳು ಕನ್ನಡದ್ದೇ ! ಇದರ ತಿಟ್ಟ ಇಲ್ಲಿದೆ :- 


ಬುಧವಾರ, ಮಾರ್ಚ್ 9, 2022

ನಲ್ಬರಹದಲ್ಲಿ ಕನ್ನಡದ್ದೇ ಒರೆಗಳು - ಎರಡು ಎತ್ತುಗೆಗಳು

ಕನ್ನಡ ನಲ್ಬರಹ ಒಂದು ಹೆಗ್ಗಡಲು ಇದ್ದ ಹಾಗೆ, ಹಲವು ಬರಹಗಾರರು ಮತ್ತು ಹಲವು ಬರಹಗಳು, ಅದರಲ್ಲಿ ಕತೆ, ಹೆರ‍್ಕತೆ, ಆಡುಗಬ್ಬ, ಕಟ್ಟೊರೆ ಮುಂತಾದವುಗಳು. ಇವೆಲ್ಲವು ಕನ್ನಡಿಗರನ್ನು ದೊಡ್ಡ ಮಟ್ಟದಲ್ಲಿ ತಲುಪಿದೆ ಹಾಗು ಕನ್ನಡಿಗರಲ್ಲಿ ಒಂದು ದೊಡ್ಡ ಓದುಗರ ಗುಂಪೇ ಇದೆ. ಇದೆಲ್ಲ ತುಂಬಾ ನಲಿವು ತರುವುದರಲ್ಲಿ ಎರಡು ಮಾತಿಲ್ಲ.

ಇದು ಒಂದೆಡೆಯಾದರೆ ಕನ್ನಡ ನಲ್ಬರಹದಲ್ಲಿ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ, ಹಲವು ಬರಹಗಾರರು ಕನ್ನಡದ್ದೇ ಒರೆ ಬಳಸಿದ್ದಾರೆ. ಇಲ್ಲಿ ಎರಡು ಎತ್ತುಗೆಗಳು ನೀಡಲಾಗಿವೆ. 

೧. ಬೆಳುವಲದ ಮಡಿಲಲ್ಲಿ (ಹೆಚ್.ದೇವಿರಪ್ಪ) :- ಹೊತ್ತಗೆ ಹೊದಿಕೆಪುಟ ತಿಟ್ಟ ಇಲ್ಲಿದೆ 


ಈ ಹೊತ್ತಗೆ ಆಯ್ದ ತುಣುಕು ಇಲ್ಲಿ ಸೇರಿಸಲಾಗಿದೆ, ಇದರಲ್ಲೇ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ. ಅವುಗಳಲ್ಲಿ "ಬೆಳುದಿಂಗಳು", "ಕದ್ದಿಂಗಳು", "ಉರುಬು", "ಒಕ್ಕಲಿಗ" ಗಮನಿಸಿ. ಇಂತಹ ಕನ್ನಡದ್ದೇ ಒರೆಗಳನ್ನು ಮತ್ತೆ ಬಳಸೋಣ, ಹಿಂಜರಿಕೆ ಬೇಡವೇ ಬೇಡ.  



೨. ನಿಸರ್ಗ (ಮಿರ್ಜಿ ಅಣ್ಣಾರಾಯ) :- ಹೊತ್ತಗೆ ಹೊದಿಕೆಪುಟ ತಿಟ್ಟ ಇಲ್ಲಿದೆ


ಹೊತ್ತಗೆ ಆಯ್ದ ತುಣುಕು ಇಲ್ಲಿ ಸೇರಿಸಲಾಗಿದೆ, ಇದರಲ್ಲೇ ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ. ಅವುಗಳಲ್ಲಿ "ಪಡುವಣ", "ಬಾನಂಚು", "ಇರುಳು", "ಬಯಲು", "ಮರುಕ" ಗಮಿನಿಸಿ. ಬರಿ ನಲ್ಬರಹ ಅಲ್ಲದೇ ಎಲ್ಲ ಬಗೆಯ ಬರಹಗಳಲ್ಲಿ ಇಂತಹ ಒರೆಗಳು ಬಳಕೆಯಾಗಲಿ. ಕನ್ನಡದ್ದೇ ಇರುಳು ಇರುಳಾಗುವುದು ಬೇಡ !!! 


ಶನಿವಾರ, ಮಾರ್ಚ್ 5, 2022

ಕನ್ನಡದ್ದೇ ಒರೆ ಹೊತ್ತು - ಈ ಹುರುಳಿನಲ್ಲು ಬಳಸೋಣ

ಕನ್ನಡ ನುಡಿಯಲ್ಲಿ ಹಲವು ಕನ್ನಡದ್ದೇ ಒರೆಗಳಿವೆ. ಆ ಹಲವು ಕನ್ನಡದ್ದೇ ಒರೆಗಳಲ್ಲಿ "ಹೊತ್ತು" ಕೂಡ ಒಂದು. ಹಳಗನ್ನಡದಲ್ಲಿ ಇದು "ಪೊೞ್ತು(ಳ್ತು)" ಎಂದು ಬಳಕೆಯಲ್ಲಿತ್ತು ಆದರೆ ಹಳಗನ್ನಡಿಂದ ಹೊಸಗನ್ನಡಕ್ಕೆ ಬಂದರೆ ಈ ಒರೆ ಮಾರ‍್ಪಾಟಿಗೆ ಒಳಗೊಂಡು ಈಗ "ಹೊತ್ತು" ಎಂದು ಬಳಕೆಯಲ್ಲಿದೆ. ಇದು ಒಂದೆಡೆಯಾದರೆ, ಯಾವುದೇ ನುಡಿ ನೋಡಿದರು ಒಂದು ಒರೆಗೆ ಹಲವು ಹುರುಳಿರುತ್ತವೆ, ಅದು ಹೊತ್ತು ಒರೆಗೆ ಒಪ್ಪುವ ಮಾತು ಕೂಡ ಹೌದು. ಹೊತ್ತು ಒರೆಯ ಹಲವು ಹುರುಳುಗಳಲ್ಲಿ ಒಂದು ನೇಸರು ಇಲ್ಲ ಸೂರ‍್ಯ. 

ಕನ್ನಡಿಗರ ಮಾತಿನಲ್ಲು ಈಗಲೂ ನೇಸರ ಹುರುಳಿನಲ್ಲಿ ಹೊತ್ತು ಒರೆ ಬಳಕೆಯಲ್ಲಿದೆ. ಹೊತ್ತು ಮುಳುಗುವುದು ಸಲುವಾಗಿ ಕನ್ನಡಿಗರ ಮಾತಿನಲ್ಲಿ ನೇಸರು ಹುರುಳಿನಲ್ಲಿ "ಹೊತ್ತು" ಒರೆ ಬಳಕೆಯಲ್ಲಿದೆ. ಕನ್ನಡಿಗರ ಮಾತನ್ನು ಹೊರತುಪಡಿಸು ನೋಡಿದರೆ ನಲ್ಬರಹದಲ್ಲಿ "ಹೊತ್ತು" ನೇಸರು ಹುರುಳಿನಲ್ಲಿ ಬಳಕೆಯಾಗಿದೆ, ಕೆಲವು ಎತ್ತುಗೆ ಆಮೇಲೆ ನೀಡುವೆ ಆದರೆ ಎಲ್ಲ ಬಗೆಯ ಕನ್ನಡ ಬರಹಗಳಲ್ಲಿ ಹೊತ್ತು ನೇಸರು ಹುರುಳಿನಲ್ಲಿ ಬಳಕೆಯಲ್ಲಿಲ್ಲ. 

ಕನ್ನಡ ಬರಹವೆಂದರೆ ಅದರಲ್ಲಿ ಸುದ್ದಿಹಾಳೆ, ಆಡಳಿತ ಕಡತ, ಅರಿಮೆ ಬರಹ ಇಲ್ಲ ಮಕ್ಕಳ ಕಲಿಕೆ ನೋಡಿದರೆ ನೇಸರು ಹುರುಳಿನಲ್ಲಿ "ಹೊತ್ತು" ಹೆಚ್ಚು ಕಡಿಮೆ ಬಳಸುವುದೇ ಇಲ್ಲ. ಕನ್ನಡ ಬರಹಗಳಲ್ಲಿ ಕನ್ನಡದ್ದೇ ಒರೆ ಬಳಸುವ ಹಿಂಜರಿಕೆ ಹಿಂದಿನಿಂದಲು ಬೆಳೆದು ಬಂದಿದೆ, ಕನ್ನಡದ್ದೇ ಒರೆಗಳ ಬಳಕೆನೆಲೆ ಕುಗ್ಗಿಸುವ ಕೆಲಸವೆಂದು ಹೇಳಬಹುದು. ತೊಡಕು ಗುರುತಿಸಿದ ಮೇಲೆ ಕನ್ನಡದ್ದೇ ಒರೆ ಸುತ್ತಲೂ ಬೆಳೆದಿರುವ ಈ ಕೀಳರಿಮೆಗೆ ಒಂದು ಕೊನೆ ಬೀಳಲಿ, ಎಲ್ಲ ಬಗೆಯ ಬರಹಗಳಲ್ಲಿ "ಹೊತ್ತು" ಒರೆ ನೇಸರು ಹುರುಳಿನಲ್ಲಿ ಬಳಕೆಯಾಗಲಿ. 

ಕನ್ನಡ ನಲ್ಬರಹದಲ್ಲಿ "ಹೊತ್ತು" ನೇಸರು ಹುರುಳಿನಲ್ಲಿ ಬಳಕೆಯಾಗಿದೆ ಎಂದು ಹಿಂದೆ ಹೇಳಿದ ಹಾಗೆ ಬಳಕೆಯಾಗಿರುವ ಒಂದೆರಡು ಎತ್ತುಗೆ ನೀಡುವೆ. ಡಾ || ಗೀತಾ ನಾಗಭೂಷಣ ಅವರು ತಮ್ಮ "ಸವಾಲು" ಹೆರ‍್ಕತೆಯಲ್ಲಿ ಬಳಸಿದ್ದಾರೆ. ಹೊತ್ತಗೆ ಹೊದಿಕೆಪುಟ ಜೊತೆ "ಹೊತ್ತು" ಒರೆ ಬಳಕೆಯಾಗಿರುವ ಹಾಳೆಬದಿಯ ತಿಟ್ಟ ಇಲ್ಲಿದೆ :- 




ಡಾ || ಕೆ.ಶಿವರಾಮ ಕಾರಂತರು ಕೂಡ ತಮ್ಮ "ಮರಳಿ ಮಣ್ಣಿಗೆ" ಹೆರ‍್ಕತೆಯಲ್ಲಿ "ಹೊತ್ತು" ಒರೆಯನ್ನು ನೇಸರು ಹುರುಳಿನಲ್ಲಿ ಬಳಸಿದ್ದಾರೆ. ಹೊತ್ತಗೆ ಹೊದಿಕೆಪುಟ ಹಾಗು "ಹೊತ್ತು" ಬಳಕೆಯಾದ ಹಾಳೆಬದಿ ತಿಟ್ಟ ಇಲ್ಲಿದೆ :- 



ಸೋಮವಾರ, ಫೆಬ್ರವರಿ 28, 2022

ಭಾರತೀಸುತ ಮತ್ತು ಕನ್ನಡದ್ದೇ ಒರೆಗಳು

ಭಾರತೀಸುತ ಅವರ ಹೆಸರು ಶಾನಭಾಗ ರಾಮಯ್ಯ ನಾರಾಯಣರಾವ್. ಕನ್ನಡ ನಲ್ಬರಹಕ್ಕೆ ಇವರ ಕೊಡುಗೆ ತುಂಬಾ ದೊಡ್ಡದು. ಇವರು ಹಲವು ಹೆರ‍್ಕತೆಗಳನ್ನು ಬರೆದಿದ್ದಾರೆ. ಇವರ ಕೆಲವು ಹೆರ‍್ಕತೆಗಳು ಓಡುತಿಟ್ಟವಾಗಿ ಬಂದಿವೆ, ಎತ್ತುಗೆಗಳು :- ಬಯಲುದಾರಿ, ಹುಲಿಯ ಹಾಲಿನ ಮೇವು, ಎಡಕಲ್ಲು ಗುಡ್ಡದ ಮೇಲೆ. 

ಭಾರತೀಸುತ ಅವರ ಹಲವು ಬರಹಗಳು ನೋಡಿದರೆ ಅದರಲ್ಲಿ ಹಲವು ಕನ್ನಡದ್ದೇ ಒರೆಗಳು ಬಳಸಿದ್ದಾರೆ. ನಮ್ಮ ಹಿರಿಯರು ಬಳಸಿರುವ ಕನ್ನಡದ್ದೇ ಒರೆಗಳನ್ನು ಗಮನಿಸೋಣ. ಕನ್ನಡದ್ದೇ ಒರೆಗಳ ಸುತ್ತಲೂ ಕೀಳರಿಮೆ ಜೊತೆ ತಿಳಿವಳಿಕೆ ಕೊರತೆ ಹಲವು ಕಡೆ ಕಾಣುತ್ತದೆ.

ಭಾರತೀಸುತ ಅವರ "ಬೆಳ್ಳಿ ಮೂಡಿತು" ಒಂದು ಒಳ್ಳೆ ಹೊತ್ತಗೆಯೆಂದು ಹೇಳಬಹುದು. ಕೊಡಗನ್ನು ನಮ್ಮ ಕಣ್ಣು ಮುಂದೆ ತರುವ ಈ ಹೊತ್ತಗೆ ಹೊದಿಕೆತಿಟ್ಟ ಇಲ್ಲಿದೆ :-


ಈ ಹೊತ್ತಗೆಯಲ್ಲಿರುವ ಕೆಲವು ಸೊಲ್ಲುಗಳು ಇಲ್ಲಿ ಹಾಕಲಾಗಿದೆ, ತಿಟ್ಟ ಇಲ್ಲಿದೆ :- 


ಈ ಸೊಲ್ಲುಗಳಲ್ಲಿ ಈ ಕೆಲವು ಕನ್ನಡದ್ದೇ ಒರೆಗಳು ಬಳಕೆಯಾಗಿವೆ :- "ಕಯ್ದು" (ಶಸ್ತ್ರ), "ದಣಿ" (ಆಯಾಸಪಡು), "ಗೆಯ್ತ" (ಕಾರ್ಯ), "ಕಡು", "ಬಾಳು". ಹೀಗೆ ನಮ್ಮ ಹಿರಿಯರು ಕೂಡ ಹಲವು ಕನ್ನಡದ್ದೇ ಒರೆ ಬಳಸಿದ್ದರು. ಕನ್ನಡದ್ದೇ ಒರೆಯಿಲ್ಲ ಎಂದು ಹೇಳುವ ಮುನ್ನ ಹಿರಿಯರ ಕನ್ನಡದ್ದೇ ಒರೆಬಳಕೆ ನೆನಪಿರಲಿ. 

ಭಾರತೀಸುತ ಅವರ ಇನ್ನೊಂದು ಹೊತ್ತಗೆ "ಬೆಂಕಿಯ ಮಳೆ". ಹೊದಿಕೆತಿಟ್ಟ ಇಲ್ಲಿದೆ :- 


ಅದರಲ್ಲಿ ಈ ಕೆಲವು ಸೊಲ್ಲುಗಳನ್ನು ಗಮನಿಸಿ, ಅದರಲ್ಲಿ "ತುಬ್ಬು" ಒರೆ ಬಳಕೆಯಾಗಿದೆ. 


ತುಬ್ಬು ಅಂದರೆ ಪತ್ತೆ ಮಾಡು, ಆದರೆ ಈ ಒರೆಯನ್ನು ನಾವು ಬಳಸುವುದಿಲ್ಲ. ಕನ್ನಡದ್ದೇ ಒರೆಯಾದ "ತುಬ್ಬು" ಮತ್ತೆ ಬಳಕೆಗೆ ಬರಲಿ, ಹೀಗೆ ಎಲ್ಲ ಬಗೆಯ ಬರಹಗಳಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸೋಣ. 

ಬುಧವಾರ, ಫೆಬ್ರವರಿ 23, 2022

ನಲ್ಬರಹದಲ್ಲಿ ಕನ್ನಡದ್ದೇ ಒರೆಗಳಿಗೆ ಒತ್ತು ನೀಡಿದ ಹೊತ್ತಗೆಗಳು

ಕನ್ನಡದ್ದೇ ಒರೆಗಳ ಕುರಿತು ಹಿಂದಿನಿಂದಲು ಹಲವು ಅನಿಸಿಕೆಗಳು ಮೂಡಿಬಂದಿವೆ. ಇದರಲ್ಲಿ ಒಂದನಿಸಿಕೆ ಏನೆಂದರೆ ಇವುಗಳನ್ನು ಬರಹಗಳಲ್ಲಿ ಬಳಸುವುದರ ಕುರಿತು. ಇದರ ಕುರಿತು ಮತನಾಡುವುದಾದರೆ ಹಿಂದಿನಿಂದಲು ಬರಹಗಾರರು ಕನ್ನಡದ್ದೇ ಒರೆ ಬಳಸಿದರು ಕೆಲವು ಬರಹಗಾರರು ಕನ್ನಡದ್ದೇ ಒರೆಗಳಿಗೆ ಒತ್ತು ನೀಡುವುದು ನಮ್ಮ ಗಮನಕ್ಕೆ ಬಂದಿರುತ್ತದೆ. ಇಲ್ಲಿ ಅಂತಹ ಕೆಲವು ಹೊತ್ತಗೆಗಳ ಹೆಸರುಗಳು ತಿಳಿಸಲಾಗಿದೆ. 

೧. ಕಬ್ಬಿಗಾರ ಕಾವಂ (ಆಂಡಯ್ಯ) :- ಹಿಂದೆ ಕನ್ನಡದ್ದೇ ಒರೆ ಬಳಸಿ ಒಳ್ಳೆ ಬರಹ ಮಾಡುವುದಕ್ಕೆ ಆಗುವುದಿಲ್ಲವೆಂದು ಅನಿಸಿಕೆಯಿದ್ದಾಗ ಆಂಡಯ್ಯ ಕನ್ನಡದ್ದೇ ಒರೆಗಳಿಗೆ ಒತ್ತು ನೀಡಿ ಬರೆದ ಬರಹ "ಕಬ್ಬಿಗರ ಕಾವಂ" ಇಲ್ಲ "ಕಾವನ ಗೆಲ್ಲ". ಹೊತ್ತಗೆ ತಿಟ್ಟ ಇಲ್ಲಿದೆ :- 


೨. ನಡತೆಯ ನಾಡು, ಸೊಬಗಿನ ಬಳ್ಳಿ (ಮುಳಿಯ ತಿಮ್ಮಪ್ಪಯ್ಯ) :- ಇದರಲ್ಲಿ "ನಡತೆಯ ನಾಡು" ಒಂದು ಕತೆ ಮತ್ತೊಂದು ಕಟ್ಟೊರೆ. ಇದರ ಕುರಿತು "ಮುಳಿಯ ತಿಮ್ಮಪ್ಪಯ್ಯ (ಜೀವನ ಮತ್ತು ಕಾರ್ಯ)" (ತೆಕ್ಕುಂಜೆ ಗೋಪಾಲಕೃಷ್ಣ ಭಟ್ಟ ) ಹೊತ್ತಗೆಯಲ್ಲಿ ತಿಳಿಸಿದ್ದಾರೆ, ಆ ಮಾತುಗಳು ಇಲ್ಲಿ ಸೇರಿಸಲಾಗಿದೆ :-  


ನಡತೆಯ ನಾಡು ಹಾಗು ಸೊಬಗಿನ ಬಳ್ಳಿ ಬರಹಗಳು ನಮಗೆ ಮುಳಿಯ ತಿಮ್ಮಪ್ಪಯ್ಯ ಸಮಗ್ರ ಸಾಹಿತ್ಯ (ಸಂಪುಟ ೧) ಹೊತ್ತಗೆಯಲ್ಲಿ ಸಿಗುತ್ತದೆ. ಹೊತ್ತಗೆ ತಿಟ್ಟ ಇಲ್ಲಿದೆ :-


"ನಡತೆಯ ನಾಡು" ಇಂದ ಕೆಲವು ಸೊಲ್ಲುಗಳು ಇಲ್ಲಿದೆ :- 



೩. ಸಮಗ್ರ ಅಚ್ಚಗನ್ನಡ ಕಾವ್ಯ (ವಿದ್ವಾನ್ ಕೊಳಂಬೆ ಪುಟ್ಟಣ್ಣಗೌಡರು) :- "ಅಚ್ಚಗನ್ನಡ ನುಡಿಕೋಶ" ಹೊತ್ತಗೆ ಬರೆಯುವುದರ ಜೊತೆ ಕನ್ನಡದ್ದೇ ಒರೆಗಳಿಗೆ ಒತ್ತು ನೀಡಿ ಬರೆದ ಕಟ್ಟೊರೆಗಳು "ಕಾಲೂರ ಚೆಲುವೆ" ಮತ್ತು "ನುಡಿವಣಿಗಳು". ಕನ್ನಡದ್ದೇ ಒರೆಗಳನ್ನು ತುಂಬಾ ಚೆನ್ನಾಗಿ ಬಳಸಿ ಬರೆಯುವುದಕ್ಕೆ ಆಗುತ್ತದೆಂದು ಎತ್ತಿತೋರಿಸಿದ್ದಾರೆ. ಹೊತ್ತಗೆ ತಿಟ್ಟ ಇಲ್ಲಿದೆ :- 


೪. ಹೊಸಗಾಲದ ಸೂಳ್ನುಡಿಗಳು (ಬರತ್ ಕುಮಾರ್) :- ಇನ್ನು ಇತ್ತೀಚಗೆ ಬಿಡುಗಡೆಯಾದ ಹೊತ್ತಗೆ "ಹೊಸಗಾಲದ ಸೂಳ್ನುಡಿಗಳು". ಇಲ್ಲಿ ಸೂಳ್ನುಡಿ ಅಂದರೆ ವಚನ. ಕನ್ನಡದ್ದೇ ಒರೆ ಬಳಸಿ ತುಂಬಾ ಚೆನ್ನಾಗಿ ತಿಳಿವನ್ನು ತಿಳಿಸುವ ಒಂದು ದಾರಿಯೆಂದರೆ "ಸೂಳ್ನುಡಿ(ವಚನ)". ಸೂಳ್ನುಡಿಗೆ ದೊಡ್ಡ ಹಿನ್ನಡವಳಿಯಿದೆ ಆದರೆ ಈ ಹೊತ್ತಿನಲ್ಲೂ ಕನ್ನಡದ್ದೇ ಒರೆ ಬಳಸಿ ಇದರ ಹಿರಿಮೆ ಸಾರುವ ಹೊತ್ತಗೆಯೇ "ಹೊಸಗಾಲದ ಸೂಳ್ನುಡಿಗಳು". ಹೊತ್ತಗೆ ತಿಟ್ಟ ಇಲ್ಲಿದೆ :- 


ಹೀಗೆ ಎಲ್ಲ ಬಗೆಯ ಬರಹಗಳಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸೋಣ. 

ಭಾನುವಾರ, ಫೆಬ್ರವರಿ 20, 2022

ಕನ್ನಡದ್ದೇ ಪದ ತಿಳಿಸುವ ಪದನೆರಕೆ ಕುರಿತು

ಕನ್ನಡ ನುಡಿಗೆ ನಿಡಿದಾದ ಹಿನ್ನಡವಳಿಯಿದೆ. ಕನ್ನಡ ನುಡಿಯಲ್ಲಿ ಹಿಂದಿನಿಂದಲು ಹಲವು ಹಲವು ಕನ್ನಡದ್ದೇ ಒರೆಗಳು ಬಳಕೆಯಾಗಿದ್ದವು. ನಮ್ಮ ಮಾತಿನಲ್ಲಿ ಹೆಚ್ಚು ಕನ್ನಡದ್ದೇ ಒರೆ ಓಡಾಡುವುದು ಆದರೆ ಬರಹಗಳಲ್ಲಿ ಹಿಂದಿನಿಂದಲು ಹೆಚ್ಚೆಚ್ಚು ಎರವಲು ಒರೆ ಸೇರಿಸುವ ವಾಡಿಕೆ ಬೆಳೆದು ಬಂದಿದೆ. ಇದರಿಂದ ಕನ್ನಡ ಬರಹಗಳು ಕಬ್ಬಿಣದ ಕಡಲೆ ಆಗಿದೆ ಅದರಲ್ಲೂ ಕನ್ನಡದಲ್ಲಿ ಕಲಿಯುವ ಮಕ್ಕಳ ಕಲಿಕೆಹೊತ್ತಗೆಯಲ್ಲಿ ಎಲ್ಲೆಮೀರಿದ ಎರವಲು ಒರೆಗಳನ್ನು ತುರುಕಿದ್ದಾರೆ. 

ಇತ್ತೀಚಗೆ ಕನ್ನಡಿಗರಲ್ಲಿ ಕನ್ನಡದ್ದೇ ಒರೆ ಸುತ್ತಲೂ ಅರಿವು ಹೆಚ್ಚಾಗುತ್ತಿದೆ. ಕನ್ನಡದ್ದೇ ಒರೆ ತಿಳಿಸುವ ಕೆಲವು ಒರೆನೆರಕೆಗಳನ್ನು ಇಲ್ಲಿ ತಿಳಿಸಲಾಗಿದೆ. ಬರಹಗಳಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸಿದಾಗ ಅದು ಹೆಚ್ಚು ಕನ್ನಡಿಗರಿಗೆ ತಲುಪುವುದು ಹಾಗು ಅದರಿಂದ ಒಳಿತು ಕೂಡ ಪಡೆಯಬಹುದು. 
ಕನ್ನಡದ್ದೇ ಒರೆ ತಿಳಿಸುವ ಪದನೆರಕೆ ಪಟ್ಟಿ :-  

೧. ಅಚ್ಚಗನ್ನಡ ನುಡಿಕೋಶ 


೨. ಸಂಸ್ಕ್ರುತ ಪದಗಳಿಗೆ ಕನ್ನಡದ್ದೇ ಪದಗಳು 


೩. ಇಂಗ್ಲಿಶ್ ಪದಗಳಿಗೆ ಕನ್ನಡದ್ದೇ ಪದಗಳು


೪. ದ್ರಾವಿಡಭಾಷಾ ಜ್ಞಾತಿಪದಕೋಶ


೫. ಇಂಗ್ಲಿಶ್-ಕನ್ನಡ ಪದನೆರಕೆ


ಹೀಗೆ ಕನ್ನಡ ಬರಹಗಳಲ್ಲಿ ಹೆಚ್ಚೆಚ್ಚು ಕನ್ನಡದ್ದೇ ಒರೆ ಬಳಸೋಣ.

ಶುಕ್ರವಾರ, ಫೆಬ್ರವರಿ 18, 2022

ಕನ್ನಡ ನಿಘಂಟು (ಕನ್ನಡ ಸಾಹಿತ್ಯ ಪರಿಷತ್ತು)

ಕನ್ನಡ ಸಾಹಿತ್ಯ ಪರಿಷತ್ತಿನ ಹಲವು ಕೆಲಸಗಳಲ್ಲಿ ತುಂಬಾ ದೊಡ್ಡ ಕೆಲಸವೆಂದರೆ "ಕನ್ನಡ ನಿಘಂಟು". ಇದು ಎಂಟು ಕಂತುಗಳ ಕೆಲಸ, ೯೦೨೨ ಪುಟಗಳ ಪದನೆರಕೆ ಜೊತೆ ಹಲವು ಏಡುಗಳ ಕೆಲಸ. ಇದರ ಮೊದಲ ಕಂತು ೧೯೭೦ ಬಿಡುಗಡೆಯಾಗಿ ಕೊನೆಯ ಕಂತು ೧೯೯೫ ನಲ್ಲಿ ಬಿಡುಗಡೆಯಾಯಿತು. ಇದರ ಮರುವಚ್ಚು ೨೦೧೦ ನಲ್ಲಿ ನಡೆಯಿತು. 

ಈ ಪದನೆರಕೆಯಲ್ಲಿ ಯಾವುದೇ ಒರೆ ನೋಡಿದರೆ ಅದರ ಹುರುಳು ಮತ್ತು ತಿಳಿವು ನೀಡುವುದರ ಜೊತೆ ಒರೆ ಬಳಕೆಗಳು ಕೂಡ ನೀಡಲಾಗಿದೆ. ಕೊನೆಯಲ್ಲಿ ಇದು ಕನ್ನಡದ್ದೇ ಒರೆ ಆಗಿದ್ದರೆ "ದೇ" ಗುರುತು ಕಾಣುತ್ತದೆ ಇಲ್ಲದಿದ್ದರೆ ಯಾವ ನುಡಿಯಿಂದ ಬಂದ ಪದವೆಂದು ಗುರುತಿನಿಂದ ತಿಳಿಯುತ್ತದೆ. ಎತ್ತುಗೆ :- "ಸಂ" ಅಂದರೆ ಸಂಸ್ಕೃತ. ಈ ಪದನೆರಕೆ ಒಂದು ಕಂತಿನ ಹೊದಿಕೆತಿಟ್ಟ ಇಲ್ಲಿದೆ :- 



ಎಂಟು ಕಂತುಗಳಲ್ಲಿ ಹಲವು ಹಲವು ಒರೆಗಳವೆ, ಅದರಲ್ಲಿ ಕೆಲವು ಇಲ್ಲಿ ಕೆಳಗಿನ ತಿಟ್ಟಗಳಲ್ಲಿ ಕಾಣಬಹುದು :- 






ಬುಧವಾರ, ಫೆಬ್ರವರಿ 16, 2022

ಕನ್ನಡ ಒಳನುಡಿ ಕೆಲವು ಪದನೆರಕೆಗಳು

ಕನ್ನಡ ನುಡಿಯನ್ನು ಕನ್ನಡಿಗರು ಹಲವು ಬಗೆಗಳಲ್ಲಿ ಮಾತನಾಡುತ್ತಾರೆ. ಒಂದು ಊರಿನಿಂದ ಇನ್ನೊಂದು ಊರಿಗೆ ಹೋದ ಹಾಗೆ ಈ ಮಾರ‍್ಪಾಟುಗಳು ಕಾಣುತ್ತವೆ. ಕನ್ನಡದಲ್ಲಿ ಹಲವು ಒಳನುಡಿಗಳಿವೆ ಎಂದು ಹೇಳಬಹುದು. ಈ ಹಲವು ಒಳನುಡಿಗಳ ಸಲುವಾಗಿ ಕೆಲವು ಒಳನುಡಿ ಪದನೆರಕೆಗಳು ಈ ಬರಹದಲ್ಲಿ ತಿಳಿಸುತ್ತಿದ್ದೇನೆ. 

೧. ಹವ್ಯಕ-ಇಂಗ್ಲಿಶ್ ನಿಘಂಟು :-  ೧೯೮೩ ನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ :- 



೨. ಚಿಗಟೇರಿ ಪದಕೋಶ :- ೧೯೯೭ ನಲ್ಲಿ ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ :-



೩. ಬೀದರ್ ಕನ್ನಡ ಕೋಶ :- ೨೦೧೦ ಏಡಿನಲ್ಲಿ ಬಿಡುಗಡೆಯಾದ ಪದನೆರಕೆ, ತಿಟ್ಟ ಇಲ್ಲಿದೆ :-  



೪. ಮಲೆನಾಡು ನುಡಿಕೋಶ :- ೨೦೧೪ ಏಡಿನಲ್ಲಿ ಹೊರತರಲಾಯಿತು, ತಿಟ್ಟ ಇಲ್ಲಿದೆ:-



೫. ಕುಂದಾಪ್ರ ಕನ್ನಡ ನಿಘಂಟು :- ಇದು ೨೦೨೧ ಅಂದರೆ ಹಿಂದಿನ ಏಡು ಬಿಡುಗಡೆಯಾಯಿತು, ತಿಟ್ಟ ಇಲ್ಲಿದೆ:- 


೬. ಕಾಸರಗೋಡು ಕನ್ನಡ ಪದಕೋಶ :- ೨೦೨೨ ಏಡಿನಲ್ಲಿ ಹೊರಬಂದ ಪದನೆರಕೆ, ಈ ಹೊತ್ತಗೆ ತಿಟ್ಟ ಇಲ್ಲಿದೆ



ಹೀಗೆ ಕನ್ನಡ ಒಳನುಡಿಗಳ ಸಲುವಾಗಿ ಹೆಚ್ಚೆಚ್ಚು ಪದನೆರಕೆಗಳು ಹೊರಬರಲಿ, ಕನ್ನಡ ಇರುವುದೇ ಅದರ ಹಲವುತನದಲ್ಲೇ ! 

ಮಂಗಳವಾರ, ಫೆಬ್ರವರಿ 15, 2022

ಮುದ್ದಣ ಪದಪ್ರಯೋಗ ಕೋಶ

ಮುದ್ದಣ (ನಂದಳಿಕೆ ಲಕ್ಷ್ಮೀನಾರಾಯಣಪ್ಪ) ಅವರು ಕೂಡ ಕನ್ನಡ ನಲ್ಬರಹಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಇವರ ಹಲವು ಬರಹಗಳು ಕುರಿತು ಈಗಲೂ ಹಲವು ನೆನಪುಗಳಿವೆ. ಇದರ ಜೊತೆ ಇವರ ಪದಬಳಕೆ ಕೂಡ ಗಮನ ಸೆಳೆಯುವಂತಹ ಕೆಲಸವಾಗಿತ್ತು. ಇವರ ಪದಬಳಕೆಗಳನ್ನು ಒಟ್ಟುಗೂಡಿಸಿ ಒಂದು ಹೊತ್ತಗೆ ಬಗೆಯಲ್ಲಿ ಜಿ.ವೆಂಕಟಸುಬ್ಬಯ್ಯ ಅವರು ಹಿಂದೆ ಹೊರತಂದರು. ಹೊತ್ತಗೆ ಹೆಸರೇ "ಮುದ್ದಣ ಪದಪ್ರಯೋಗ ಕೋಶ". 

ಈ ಹೊತ್ತಗೆಯಲ್ಲಿರುವ ಕೆಲವು ಕನ್ನಡದ್ದೇ ಒರೆಗಳ ಪಟ್ಟಿ ಇಲ್ಲಿದೆ :- 

ಅಱಿ(ರಿ)ಲ್ = ನಕ್ಷತ್ರ

ಎಲರ್ = ಗಾಳಿ

ಕೆನ್ನೀರ್ = ನೆತ್ತರು, ರಕ್ತ

ಗಾಳೆದೇರ್ = ವಿಮಾನ

ಗಾಳೆವಟ್ಟೆ = ಆಕಾಶ

ತೇರಾಳ್ = ಸಾರಥಿ

ನೇಸರ್ಬಳಿ = ಸೂರ್ಯವಂಶ

ಪೂಣ್ = ಪ್ರತಿಜ್ಞೆಮಾಡು

ಬರ್ದಿಲ = ದೇವತೆ

ಸೂೞ್(ಳ್) = ಸರದಿ, ಸಮಯ

ಹೊತ್ತಗೆ = ಪುಸ್ತಕ

ಮುದ್ದಣ ಅವರ ಪದಬಳಕೆ ಈಗಲೂ ನಮಗೆ ದಾರಿತೋರಿಸುತ್ತದೆ. "ಮುದ್ದಣ ಪದಪ್ರಯೋಗ ಕೋಶ" ಹೊತ್ತಗೆ ತಿಟ್ಟ ಇಲ್ಲಿದೆ :- 



ಕನ್ನಡದ್ದೇ ಒರೆಗಳ ಸುತ್ತಲೂ

ಯಾವುದೇ ನುಡಿಯಾಗಲಿ ಅದರಲ್ಲಿ ತನ್ನದೇ ಒರೆಗಳ ಜೊತೆ ಎರವಲು ಒರೆಗಳಿರುತ್ತವೆ. ನುಡಿಗಳ ನಡುವೆ ಒರೆಗಳು ಓಡಾಡುವುದು ಯಾವಗಲು ನಡೆಯುವ ಕೆಲಸವೇ ಹೌದು. ಕನ್ನಡ ಹೆಮ್ಮರವಾಗಿ ಬೆಳೆದಿರುವ ಒಂದು ನುಡಿಯೆಂದು ಗಮನಿಸಿದಾಗ ಹಿಂದಿನಿಂದಲು ಹಲವು ಕನ್ನಡದ್ದೇ ಒರೆಗಳು ಬಳಕೆಯಲ್ಲಿತ್ತು. ಆದರೆ ಕನ್ನಡದ್ದೇ ಒರೆಗಳ ಸುತ್ತಲೂ ಹಿಂದಿನಿಂದಲು ಒಂದು ಬಗೆಯ ಕೀಳರಿಮೆ ಉಂಟು. ಇದರಿಂದ ಕೆಲವು ಕನ್ನಡದ್ದೇ ಒರೆಗಳು ಬಳಕೆಯಿಂದ ಬಿದ್ದಿವೆ ಹಾಗು ಇನ್ನು ಕೆಲವು ಒರೆಗಳ ಬಳಕೆನೆಲೆ ಕುಗ್ಗಿಸಿ ಬರಿ ಆಡುಮಾತಿನಲ್ಲಿ ಇಲ್ಲವೇ ಕೆಟ್ಟ ನೆಲೆಯಲ್ಲಿ ಬಳಕೆ ಆಗುವುದು ನಾವು ನೋಡಬಹುದು. 

ಇದರ ಕುರಿತು ಎಲ್.ಗುಂಡಪ್ಪ ಅವರು ಕೂಡ "ಕನ್ನಡ ತಮಿಳು" ಅಂಕಣದಲ್ಲಿ ಹೇಳಿದ್ದಾರೆ. ಅವರ ಮಾತುಗಳು ಕೆಳಗಿನ ತಿಟ್ಟದಲ್ಲಿ ನೋಡಬಹುದು. 


ಮೇಲಿನ ಮಾತುಗಳನ್ನು ಗಮನಿಸಿದರೆ ಕನ್ನಡದ್ದೇ ಒರೆಗಳ ಸುತ್ತಲೂ ಉಂಟಾಗಿರುವ ಕೀಳರಿಮೆ ಕೆಲವು ನಾಳುಗಳ ಮಾತಲ್ಲ ಆದರೆ ಹಿಂದಿನಿಂದಲು ನಡೆದುಕೊಂಡು ಬಂದಿದೆ. ಈ ಹೊತ್ತಿನಲ್ಲಿ ಇದನ್ನು ತಿಳಿದುಕೊಂಡ ಮೇಲೆ, ನಾವು ಎಲ್ಲೆಡೆ ಹೆಚ್ಚೆಚ್ಚು ಕನ್ನಡದ್ಡೇ ಒರೆ ಬಳಸೋಣ.  ಎಲ್.ಗುಂಡಪ್ಪ ಅವರ ಈ ಮೇಲಿನ ಮಾತುಗಳು "ಸಂಭಾವನೆ" ಹೊತ್ತಗೆಯ "ಕನ್ನಡ ತಮಿಳು" ಅಂಕಣದಲ್ಲಿದೆ. 


ಸೋಮವಾರ, ಫೆಬ್ರವರಿ 14, 2022

ಗೋವಿಂದ ಪೈ ನಿಘಂಟು

ಕನ್ನಡ ನಲ್ಬರಹಕ್ಕೆ ಹಲವರ ಕೊಡುಗೆ ಇದೆ, ಅದರಲ್ಲಿ ರಾಷ್ಟ್ರಕವಿ ಗೋವಿಂದ ಪೈ ಅವರು ಕೂಡ ಒಬ್ಬರು. ಅವರ ಬರಹಗಳು ಹಲವು ಮಂದಿ ತಲುಪಿದೆ ಹಾಗು ಹಲವರ ಮೆಚ್ಚುಗೆ ಪಡೆದಿದೆ. ಆದರೆ ಹಿರಿಯರ ಪದಬಳಕೆ ಕಡೆ ಕೂಡ ಗಮನ ನೀಡಿ ಅದರ ಸಲುವಾಗಿ ಹೊರತಂದ ಹೊತ್ತಗೆಯೇ "ಗೋವಿಂದ ಪೈ ನಿಘಂಟು", ಇದನ್ನು ಬರೆದವರು ಪ್ರೊ.ಎ.ವಿ.ನಾವಡ. 


"ಗೋವಿಂದ ಪೈ ನಿಘಂಟು" ಹೊತ್ತಗೆಯಲ್ಲಿ ಬಳಕೆಯಾದ ಕೆಲವು ಕನ್ನಡದ್ದೇ ಪದಗಳು ಹೀಗಿವೆ :- 

ನೇರ್ಮೆ = ನೇರ

ತಾನ್ಮೆ = ತಾನೆಂಬ ಹೆಮ್ಮೆ, ಅಹಂಕಾರ

ಎದುರುಗಾಣಿಕೆ = ಎದುರುಗೊಳ್ಳುವಿಕೆ

ಒಸರಿಹೋಗಿ = ದ್ರವಿಸು

ಹೊಗೆಮೋರೆ = ಹೊಗೆಕಾರುವ ಮುಖ

ಮಾತಾಟ = ಮಾತುಗಾರಿಕೆ

ಮುಟ್ಟು = ಉಪಕರಣ

ಕನ್ನಡಿಕೆ = ಕನ್ನಡೀಕರಣ

ತೆಂಪಡು = ನೈಋತ್ಯ

ತೆಮ್ಮೂಡು = ಅಗ್ನೇಯ

ನಮ್ಮ ಹಿರಿಯರು ಕೂಡ ಹಲವು ಕನ್ನಡದ್ದೇ ಪದ ಬಳಸಿದ್ದರು. ಹೊತ್ತಗೆ ತಿಟ್ಟ ಇಲ್ಲಿದೆ :- 


ಕೊಡವ ಕನ್ನಡ ನಿಘಂಟು

ಪದನೆರಕೆಗಳಲ್ಲಿ ಹಲವು ಬಗೆಗಳಿವೆ, ಅದರಲ್ಲಿ ಇನ್ನುಡಿಯ ಪದನೆರಕೆಗಳು ಕೂಡ ಒಂದು ಬಗೆ. ಇದಕ್ಕೆ ಒಂದು ಎತ್ತುಗೆ "ಕೊಡವ ಕನ್ನಡ ನಿಘಂಟು". ೧೯೮೩ ಏಡಿನಲ್ಲಿ ಹೊರಬಂದ ಈ ಪದನೆರಕೆ ಆಮೇಲೆ ೨೦೧೪ ನಲ್ಲಿ ಎರಡನೆ ಅಚ್ಚು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಆಯಿತು. 

ಈ ಪದನೆರಕೆಯಲ್ಲಿ ಹಲವು ಕೊಡವ ಪದಗಳ ಜೊತೆ ಬರಹಗಾರರಾದ ಐ.ಮಾ.ಮುತ್ತಣ್ಣ ಅವರ ಕೆಲವು ನಿಲುವುಗಳು ಕೂಡ ಕಾಣಬಹದು, ಅದೇನೆಂದರೆ ಕೊಡವ ನುಡಿಗೆ ಮಹಾಪ್ರಾಣ ಬೇಡದವೆಂದು ತಿಳಿಯಾಗಿ ತಿಳಿಸಿದ್ದಾರೆ, ಅದರ ತಿಟ್ಟ ಇಲ್ಲಿದೆ :- 


"ಕೊಡವ ಕನ್ನಡ ನಿಘಂಟು" ಹೊತ್ತಗೆ ತಿಟ್ಟ ಇಲ್ಲಿದೆ :-